ನಾಡಗೀತೆ – ಜಯ ಹೇ ಕರ್ಣಾಟಕ ಮಾತೆ!

(ಕರ್ನಾಟಕ ಸರ್ಕಾರ ನಾಡಗೀತೆಯೆಂದು ಸ್ವೀಕಾರ ಮಾಡಿರುವ ಕವಿತೆ)

 

ಜಯ್ ಭಾರತ ಜನನಿಯ ತನುಜಾತೆ,

               ಜಯ ಹೇ ಕರ್ಣಾಟಕ ಮಾತೆ!

 

ಜಯ್ ಸುಂದರ ನದಿವನಗಳ ನಾಡೆ,

               ಜಯ ಹೇ ರಸಋಷಿಗಳ ಬೀಡೆ!

ಭೂದೇವಿಯ ಮಕುಟದ ನವಮಣಿಯೆ,

ಗಂಧದ ಚಂದದ ಹೊನ್ನಿನ ಗಣಿಯೆ;

ರಾಘವ ಮಧುಸೂದನರವತರಿಸಿದ

               ಭಾರತ ಜನನಿಯ ತನುಜಾತೆ,

               ಜಯ ಹೇ ಕರ್ಣಾಟಕ ಮಾತೆ!

 

ಜನನಿಯ ಜೋಗುಳ ವೇದದ ಘೋಷ,

ಜನನಿಗೆ ಜೀವವು ನಿನ್ನಾವೇಶ.

               ಹಸುರಿನ ಗಿರಿಗಳ ಸಾಲೆ

               ನಿನ್ನಯ ಕೊರಳಿನ ಮಾಲೆ.

ಕಪಿಲ ಪತಂಜಲ ಗೌತಮ ಜಿನನುತ

               ಭಾರತ ಜನನಿಯ ತನುಜಾತೆ,

               ಜಯ ಹೇ ಕರ್ಣಾಟಕ ಮಾತೆ!

 

ಶಂಕರ ರಾಮಾನುಜ ವಿದ್ಯಾರಣ್ಯ

ಬಸವೇಶ್ವರರಿಹ ದಿವ್ಯಾರಣ್ಯ.

               ರನ್ನ ಷಡಕ್ಷರಿ ಪೊನ್ನ

               ಪಂಪ ಲಕುಮಿಪತಿ ಜನ್ನ

ಕಬ್ಬಿಗರುದಿಸಿದ ಮಂಗಳಧಾಮ,

ಕವಿಕೋಗಿಲೆಗಳ ಪುಣ್ಯಾರಾಮ!

ನಾನಕ ರಾಮಾನಂದ ಕಬೀರರ

               ಭಾರತ ಜನನಿಯ ತನುಜಾತೆ,

               ಜಯ ಹೇ ಕರ್ಣಾಟಕ ಮಾತೆ!

 

ತೈಲಪ ಹೊಯ್ಸಳರಾಳಿದ ನಾಡೆ,

ಡಂಕಣ ಜಕಣರ ನಚ್ಚಿನ ಬೀಡೆ;

               ಕೃಷ್ಣ ಶರಾವತಿ ತುಂಗಾ

ಕಾವೇರಿಯ ವರ ರಂಗ.

ಚೈತನ್ಯ ಪರಮಹಂಸ ವಿವೇಕರ

               ಭಾರತ ಜನನಿಯ ತನುಜಾತೆ,

               ಜಯ ಹೇ ಕರ್ಣಾಟಕ ಮಾತೆ!

 

ಸರ್ವ ಜನಾಂಗದ ಶಾಂತಿಯ ತೋಟ,

ರಸಿಕರ ಕಂಗಳ ಸೆಳೆಯುವ ನೋಟ.

               ಹಿಂದೂ ಕ್ರೈಸ್ತ ಮುಸಲ್ಮಾನ

               ಪಾರಸಿಕ ಜೈನರುದ್ಯಾನ.

ಜನಕನ ಹೋಲುವ ದೊರೆಗಳ ಧಾಮ,

               ಗಾಯಕ ವೈಣಿಕರಾರಾಮ!

ಕನ್ನಡ ನುಡಿ ಕುಣಿದಾಡುವ ಗೇಹ!

ಕನ್ನಡ ತಾಯಿಯ ಮಕ್ಕಳ ದೇಹ!

 

ಜಯ್ ಭಾರತ ಜನನಿಯ ತನುಜಾತೆ,

               ಜಯ ಹೇ ಕರ್ಣಾಟಕ ಮಾತೆ!

ಜಯ್ ಸುಂದರ ನದಿವನಗಳ ನಾಡೆ,

               ಜಯ ಹೇ ರಸಋಷಿಗಳ ಬೀಡೆ!